ಹುಣಸೂರು:ಅ.02.ಮೈಸೂರು- ಹುಣಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬನ್ನಿಕುಪ್ಪೆಯ ಬಳಿ ಮೇಲ್ ಸೇತುವೆ(ಫ್ಲೈ ಓವರ್)ನಿರ್ಮಾಣ ಮಾಡಲು ಕಳೆದ ಆರು ಏಳು ತಿಂಗಳ ಹಿಂದೆಯೇ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಈ ಕಾಮಗಾರಿ ಮಂದಗಾತಿಯಲ್ಲಿ ಸಾಗುತ್ತಿರುವುದರಿಂದ ಪ್ರತಿದಿನ 40- 50 ಸಾವಿರ ವಾಹನಗಳು ಓಡಾಡುತ್ತಿರುವ ಈ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಬಹಳ ತೊಂದರೆಯಾಗಿದೆ.
ಬನ್ನಿಕುಪ್ಪೆ ಕಸಬಾ ಹೋಬಳಿ ಕೇಂದ್ರವಾಗಿದ್ದು ಮೈಸೂರು ಜಿಲ್ಲೆಯಲ್ಲಿಯೇ ಬನ್ನಿಕುಪ್ಪೆ ಅವರೇಕಾಯಿ ಬೆಳೆಸುವ ಹಾಗೂ ಮಾರಾಟ ಮಾಡುವ ಕೇಂದ್ರವಾಗಿದ್ದು ರೈತರು ಇನ್ನು ಎರಡು ತಿಂಗಳಲ್ಲಿ ರಾಜ್ಯ ಹೆದ್ದಾರಿ ಬದಿಯಲ್ಲಿ ಅವರೆಕಾಯಿ ಮಾರಾಟ ಮಾಡಲು ಪ್ರಾರಂಭಿಸಲಿದ್ದು, ಹಾಗೂ ಬನ್ನಿಕುಪ್ಪೆ ಗ್ರಾಮದಲ್ಲಿ ಶಾಲಾ ಕಾಲೇಜು ಮಕ್ಕಳು ತಿರುಗಾಡುವ ಪ್ರದೇಶವಾಗಿದ್ದು ಜನದಟ್ಟಣೆ, ವಾಹನದಟ್ಟಣೆ ಹೆಚ್ಚಾಗಿದ್ದು ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತದೆ.
ಆದ್ದರಿಂದ ಮಂದಗತಿಯಲ್ಲಿ ಸಾಗುತ್ತಿರುವ ಈ ಕಾಮಗಾರಿಯನ್ನು ಆದಷ್ಟು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ವಾಹನ ಸವಾರರಿಗೆ ಶಾಲಾ ಕಾಲೇಜುಗಳಿಗೆ ಓಡಾಡುವ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕಾಗಿ ಸಂಸದರಾದ ಯದುವೀರ ಕೃಷ್ಣದತ್ತ ಒಡೆಯರ್ ರವರು, ರಾಜ್ಯ ಹೆದ್ದಾರಿ ಆಯುಕ್ತರು, ಕಾರ್ಯ ಪಾಲಕ ಅಭಿಯಂತರರು ಕೂಡಲೇ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಬನ್ನಿಕುಪ್ಪೆ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ರವರು ಮಾಧ್ಯಮದ ಮೂಲಕ ತಿಳಿಸಿದ್ದಾರೆ.