Ticker

6/recent/ticker-posts

*ನಾಗಮಂಗಲ ಟಿಎಪಿಸಿಎಂಎಸ್ ಕಾಂಗ್ರೆಸ್ ಬೆಂಬಲಿಗರಿಗೆ ಜಯಭೇರಿ*

ಚುನಾವಣೆಯಲ್ಲಿ ಒಂದು ಸ್ಥಾನದಲ್ಲಿ ಗೆಲುವು ಕಂಡ ಜೆಡಿಎಸ್ ಬೆಂಬಲಿಗರಿಗೆ ಮುಖಭಂಗ. 

ನಾಗಮಂಗಲ: ತಾಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ನಿರ್ದೇಶಕರ  7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 6 ಸ್ಥಾನ ಪಡೆದು ಗೆಲುವು ಸಾಧಿಸುವ ಮೂಲಕ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. 

ಜೆಡಿಎಸ್ ಒಂದು ಸ್ಥಾನ ಪಡೆಯುವಲ್ಲಿ ತೀವ್ರ ಮುಖಭಂಗವಾಗಿದೆ.
ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡ ಬೆಂಬಲಿತ ಬ್ರಹ್ಮದೇವರಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎನ್. ಉಜ್ವಲ ಮಂಜುನಾಥ(492) ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಗೀತಾ ದಾಸೇಗೌಡರ ವಿರುದ್ಧ ಗೆಲುವು ಸಾಧಿಸಿದರೆ ಜೆಡಿಎಸ್  ಬೆಂಬಲಿತ ರಾಗಿ ಚುನಾವಣೆ ಅಖಾಡದಲ್ಲಿದ್ದ ಯಶೋದಮ್ಮ (379) ಯೋಗೇಶ್ (115)ಸಿ.ಕೆ ಪ್ರದೀಪ್ (356) ಬಿ.ವಿ ಕೆಂಚೇಗೌಡ (113) ಸಿದ್ದರಾಜು (203) ಮತ ಪಡೆದು ಪರಾಭವಗೊಂಡಿದ್ದಾರೆ. 

ಸರ್ಕಾರಿ ಪದವಿಪೂರ್ವ ಕಾಲೇಜಿನ ಬ್ರಹ್ಮದೇವರಹಳ್ಳಿ ಮತಗಟ್ಟೆ ಸಂಖ್ಯೆ 2 ರಲ್ಲಿ ಕೃಷಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಹಾಗೂ ಶ್ರೀಮತಿ ಧನಲಕ್ಷ್ಮಿ ಚೆಲುವರಾಯಸ್ವಾಮಿ, ಪುತ್ರ ಸಚಿನ್ ಚೆಲುವರಾಯಸ್ವಾಮಿ ಹಾಗೂ ಸೊಸೆ ಆಕಾಂಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ನಿರ್ದೇಶಕ ಎನ್ ಅಪ್ಪಾಜಿಗೌಡ ಸೇರಿದಂತೆ ಮತದಾನ ಮಾಡಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಬಿರುಸಿನಿಂದ ಮತದಾನ ನಡೆಯಿತು ಮಧ್ಯಾಹ್ನದ ವೇಳೆಗೆ ಬಹುತೇಕ ಶೇರುದಾರರು ತಮ್ಮ ಮತವನ್ನು ಚಲಾಯಿಸಿದರು.

*ಕಾಂಗ್ರೆಸ್ 6 ಸ್ಥಾನಗಳಲ್ಲಿ ಭರ್ಜರಿ ಗೆಲುವು*
ರಾಜಕಾರಣ ಪ್ರವೇಶ ಪಡೆದ ದಿನದಿಂದ ಟಿ ಎ ಪಿ ಸಿ ಎಂ ಎಸ್ ಅಧಿಕಾರ ಸಚಿವ ಎನ್. ಚೆಲುವರಾಯಸ್ವಾಮಿ ಪರವಾಗಿಯೇ ಇದೆ, ಈ ಬಾರಿ ಕಾಂಗ್ರೆಸ್ ಸಹ ಗೆದ್ದು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಬಿಂಡಿಗನವಿಲೆ ಕ್ಷೇತ್ರದಿಂದ ಎನ್. ಟಿ ಕೃಷ್ಣಮೂರ್ತಿ (479) ಬೆಳ್ಳೂರು ಕ್ಷೇತ್ರದಿಂದ ಲಕ್ಷ್ಮಣಗೌಡ (345) ಗೊಂಡೆನಹಳ್ಳಿ ಕ್ಷೇತ್ರದಿಂದ ಸಿ.ಜಿ ಸುರೇಂದ್ರ (263) ಮಾಯಿ ಗೋನಹಳ್ಳಿ ಕ್ಷೇತ್ರದಿಂದ ಸಿ ಧನರಾಜ್ (346) ಚಿಣ್ಯ ಕ್ಷೇತ್ರದಿಂದ ಅಲ್ಪಹಳ್ಳಿ ಕೃಷ್ಣೇಗೌಡ (539) ದೇವಲಾಪುರ ಕ್ಷೇತ್ರದಿಂದ ವಸಂತ ಮಣಿ (416)ಗೆಲುವು ಸಾಧಿಸುವ ಮೂಲಕ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿಯವರ ಅಸ್ತಿತ್ವವನ್ನು ಭದ್ರಗೊಳಿಸಿದ್ದಾರೆ. 


*ಕಾಂಗ್ರೆಸ್ ಬೆಂಬಲಿತ 5 ಸ್ಥಾನಗಳಿಗೆ ಅವಿರೋಧ ಆಯ್ಕೆ*
ನಾಗಮಂಗಲ ಕ್ಷೇತ್ರದಿಂದ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ. ಆಶಾ ಸೇರಿದಂತೆ 'ಎ'ತರಗತಿಯಿಂದ ವಿವಿಧ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಆಯ್ಕೆಯಾಗಬೇಕಾಗಿದ್ದ 4 ಸ್ಥಾನಗಳಿಗೆ ಬಿ.ಎಂ ಪ್ರಕಾಶ್, ಮರಿಗೌಡ, ಕೆ.ವಿ ದಿನೇಶ್ ಹಾಗೂ ಎ. ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ 7 ಮಂದಿ ಅಭ್ಯರ್ಥಿಗಳ ಪೈಕಿ 6 ಮಂದಿ ಅಭ್ಯರ್ಥಿಗಳು ಮುಂದಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಚಿವ ಚೆಲುವರಾಯ ಸ್ವಾಮಿ ಪರ ಜಯ ಘೋಷದೊಂದಿಗೆ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.

ಎಣಿಕೆ ಕಾರ್ಯ ಪೂರ್ಣಗೊಂಡ ನಂತರ ಚುನಾವಣೆ ಧಿಕಾರಿಯಾಗಿ ಪಟ್ಟಣದ ತಹಸಿಲ್ದಾರ್ ಆದರ್ಶ ಜಿ ರವರು ಫಲಿತಾಂಶ ಪ್ರಕಟಿಸಿದರು.

ಮತ ಎಣಿಕೆ ವೇಳೆ ಡಿ. ವೈ ಎಸ್ ಪಿ ಚೆಲುವರಾಜು, ಸಿಪಿಐ ನಿರಂಜನ್, ಹಾಗೂ ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಠಾಣೆ ಪಿಎಸ್ಐ ರಾಜೇಂದ್ರ, ಬಿಂಡಿಗನವಿಲೆ ಪಿಎಸ್ಐ ಮಾರುತಿ ನೇತೃತ್ವದಲ್ಲಿ ಪೊಲೀಸ್ ಬಂದೋ ಬಸ್ತ್ ನಿಯೋಜಿಸಲಾಗಿತ್ತು.